Monday, February 8, 2010

ಲಾಟರಿ

ಗೌಡರ ಮನೆಯ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ರಂಗಜ್ಜ ಕನಸುಗಳ ಲೋಕದಲ್ಲಿ ವಿಹರಿಸತೊಡಗಿದ್ದ. ಟಿ.ವಿ.ಯಲ್ಲಿ ಮೂಡಿಬರುತ್ತಿದ್ದ ಜಾಹೀರಾತು ಅವನನ್ನು ವಾಸ್ತವ ಲೋಕದಿಂದ ಕನಸುಗಳ ಜಗತ್ತಿಗೆ ಕೈ ಹಿಡಿದು ಕರೆದುಕೊಂಡು ಹೋಗಿತ್ತು.ಆ ಜಾಹೀರಾತಿನಲ್ಲಿ ಗುಡಿಸಲ ಮನೆಯ ಬಡವನಿಗೆ ಕೋಟಿ ರೂಪಾಯಿಯ ಬಂಪರ್ ಲಾಟರಿ ಹೊಡೆದು, ಅವ ಮಹಡಿ ಮನೆ ಕಟ್ಟಿಸುತ್ತಾನೆ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾನೆ. ಈ ರಂಜನೀಯ ಜಾಹೀರಾತನ್ನು ಕಣ್ಣ ತುಂಬಾ ತುಂಬಿಕೊಂಡು ರಂಗಜ್ಜ ಮನೆ ಕಡೆ ಮುಖ ಮಾಡುತ್ತಾನೆ.ರಂಗಜ್ಜ ಗುಡಿಸಲಿಗೆ ಬಂದಾಗ ಆಗಲೇ ರಾತ್ರಿ ಒಂಬತ್ತಾಗಿತ್ತು. ಅಡ್ಡಗೋಡೆಯ ಮೇಲಿಟ್ಟಿದ್ದ ಬುಡ್ಡಿ ಚಿಮಣಿ ಹೊಗೆಯಿಂದ ಅಲುಗಾಡತೊಡಗಿತ್ತು. ಮಗಳು ಹನುಮಿ ಒಲೆ ಊದುತ್ತಿರುವ ಸದ್ದು ಕೇಳಿ, ‘ಕಟ್ಟಿಗೆ ಹಸಿ ಅದಾವನು. ಗುಡಿಸಲ ತುಂಬಾ ಹೊಗಿ ಅಡರಿ ಕುಂದ್ರುಸ್ಯ ಕೊಡಾವಲ್ದು. ಸ್ವಲ್ಪ ಚಿಮಣಿ ಎಣ್ಣಿ ಹಾಕಿ ಒಲಿ ಹಚ್ಚು’ ಅಂದ.ಹನುಮಿ ಒಲಿಯೊಳಗ ಕಟ್ಟಿಗೆ ತುರುಕುತ್ತಾ, ಹೆಂಚಿನಲ್ಲಿ ಬೇಯಿಸುತ್ತಿದ್ದ ರೊಟ್ಟಿಯನ್ನು ತಿರುವಿ ಹಾಕಿ, ಗುಡಿಸಲ ತುಂಬಾ ದಟ್ಟವಾಗಿ ಕವಿದಿದ್ದ ಹೊಗೆಯಿಂದಾಗ ಕಣ್ಣಲ್ಲಿ ತೆಳ್ಳಗೆ ಆಡುತ್ತಿದ್ದ ನೀರನ್ನು ಸೆರಗಿನ ಚುಂಗಿನಿಂದ ಒರೆಸಿಕೊಳ್ಳುತ್ತಾ, ‘ಚಿಮಣಿ ಎಣ್ಣೆ ಆಗೈತಿ. ಕಟಗಿ ನೋಡಿದರ ಹಸಿ ಆದಾವು. ರೊಟ್ಟಿ ಮಾಡೋದರಾಗ ಜೀವ ಸಣ್ಣ ಆಕ್ಕೆತಿ. ನಾಳೆ ಎಮ್ಮಿ ಮೇಸಿಕೊಂಡು ನೀನು ಬರುವಾಗ ಅಲ್ಲೇ ಗೌಡರ ಹೊಲದಾಗ ಒಂದು ಹೊರಿ ಒಣ ಕಟಗಿ ತಗೊಂಡು ಬಾ...’ ಅಂತ ಹನುಮಿ ಒಂದು ಕೇಳಿದರ ಒಂಬತ್ತು ಹೇಳಿದಳು.“ಇನ್ನೊಂದು ವರ್ಷವೊಪ್ಪತ್ತು ಹ್ಯಾಂಗರ ಮಾಡು, ಕೊಟ್ಟ ಮನಿಗೆ ಹೋಗಿ ಅಂತ. ದೇವರು ನಮ್ಮ ಪಾಲಿಗೆ ಅದಾನು.”“ಅಲ್ಲೋ ಎಪ್ಪಾ. ಒಂದು ಹೊತ್ತಿಗೇ ತಿನ್ನಾಕ ಸರಿಯಾಗಿ ಕೂಳಿಲ್ಲ. ಇನ್ನ ಮದುವಿ ಹ್ಯಾಂಗ ಮಾಡುಸ್ತೀ.”“ಮಗಳ ನೀನೇನು ಹೆದರಬೇಡವ. ನಿನ್ನೆ ಗೌಡರ ಮನಿಗೆ ಹೋಗಿದ್ನಲ ಅಲ್ಲಿ ಟಿ.ವಿ. ನೋಡಿದೆ. ಅದರಾಗ ಲಾಟರಿ ಲಕ್ಷ್ಮಿ ಒಲಿದು ಬಡುವ ಮನುಷ್ಯ ಮಹಡಿ ಕಟ್ಟಿಸಿದ. ನಾನೂ ನಾಳೆ ಲಾಟರಿ ತಗೊಂತಿನಿ. ಆ ಲಾಟರಿ ಲಕ್ಷ್ಮಿ ನನಗೂ ಒಲಿದ ಒಲಿತಾಳ. ಅದರಾಗ ನಿನ್ನ ಮದುವಿ ಮಾಡುತಿನಿ”. ಅಂತ ರಂಗಜ್ಜ ಲಾಟರಿ ಹೊಡೆದವನಂತೆ ಬಹು ಹಿಗ್ಗಿನಿಂದ ನುಡಿದ.“ಅಪ್ಪ, ನಾವು ದುಡಿದಿದ್ದ ನಮಗೆ ಇಲ್ಲ. ಇನ್ನು ಲಾಟರಿ ಹೊಡೆಯುತ್ತ ಅನ್ನೋದು ಕನಸಿನ ಮಾತು. ಎಮ್ಮೆ ಹೈನ ಸರಿಯಾಗಿ ಮಾಡಿಕೊಂಡು ಹಾಲು, ಮೊಸರು ಮಾರಿ ನಾಲ್ಕು ಕಾಸು ಉಳಿಸೋಣಂತ” ಹೀಗೆ ಹನುಮಿ ತನ್ನ ಎದೆಯಾಗಿನ ತಳಮಳವನ್ನು ರಂಗಜ್ಜನ ಮುಂದೆ ಇಡಿಯಾಗಿ ಸುರುವಿದಳು.“ನಿನಗೆ ತಿಳಿಯಾಕಿಲ್ಲ. ಮಳ್ಳ ಪಡಿಸೆಂಟು ನೀನು. ಸುಮ್ನೆ ರೊಟ್ಟಿ ತಾ. ಹಸಿ ಮೆಣಸಿನಕಾಯಿ ಹಿಂಡಿ ಇದ್ರ ತಟಗು ಹಚ್ಚು” ಎಂದು ಹನುಮಿಯ ಮಾತಿಗೆ ಕ್ಯಾರೆ ಅನ್ನದೆ ಗಾಳಿಗೆ ತೂರಿದ. ಆಕೆ ಬುಡ್ಡಿ ಚಿಮಣಿಯ ಬತ್ತಿ ಏರಿಸ ರಂಗಜ್ಜನಿಗೆ ರೊಟ್ಟಿ ಹಚ್ಚಿ ಕೊಟ್ಟಳು.ರಂಗಜ್ಜ ರೊಟ್ಟಿ ತಿಂದು, ಎಮ್ಮೆಗೆ ಮೇವು ಹಾಕಿ ಅಂಗಳದಲ್ಲಿ ಚಾಪೆ ಹಾಸಿ ಮುಗಿಲ ಕಡೆ ಮುಖ ಮಾಡಿ ಮಲಗಿದ. ಆಕಾಶದಲ್ಲಿ ಚುಕ್ಕಿ ಚಂದ್ರಮರ ರಾಸಲೀಲೆ ನಡೆದಿತ್ತು. ತಣ್ಣಗೆ ಗಾಳಿ ಚಾಮರ ಬೀಸತೊಡಗಿತ್ತು. ರಂಗಜ್ಜನ ಕಣ್ಣ ತುಂಬಾ ಕನಸುಗಳ ಮೆರವಣಿಗೆ ನಡೆದಿತ್ತು.ಗುಡಿಸಲ ಒಳಗೆ ಮಲಗಿದ್ದ ಹನುಮಿ ಪದೆ ಪದೆ ಮಗ್ಗುಲ ಬದಲಿಸತೊಡಗಿದ್ದಳು. ಅದು ಹರೆಯದ ಹೆಣ್ಣೆಂಗಸು. ಅವಳ ವಾರಿಗೆಯ ಗೆಳತಿಯರು ಆಗಲೇ ಮದುವೆಯಾಗಿ ಮಕ್ಕಳನ್ನೂ ಕಂಡಿದ್ದಾರೆ. ಅವರು ಯುಗಾದಿ ಹಬ್ಬಕ್ಕೋ, ಪಂಚಮಿ ಹಬ್ಬಕ್ಕೊ ಊರಿಗೆ ಬಂದಾಗ ಅವರನ್ನು ನೋಡಿದ ಹನುಮಿಯ ಹೊಕ್ಕುಳದಾಳದಲ್ಲಿ ಚಿಟಮುಳ್ಳು ಆಡಿಸಿದಂತಾಗುತ್ತದೆ. ‘ನನ್ನ ಹಣೆಬರಹದಾಗ ಲಗ್ನ ಆಗೋದು ಬರದಿದ್ದಂಗಿಲ್ಲ..’ ಅಂತ ಅದೆಷ್ಟೋ ಸಲ ಪೇಚಾಡಿದ್ದಾಳೆ.ಈ ಕಡೆ ರಂಗಜ್ಜನಿಗೆ ಕನಸಿನಲ್ಲಿ ಲಾಟರಿ ದೇವತೆ ಒಲಿದು ಹರ್ಷದ ಶಿಖರದ ತುತ್ತ ತುದಿಯಲ್ಲಿ ನಿಂತಿದ್ದಾನೆ. ಗುಡಿಸಲು ಮಾಯವಾಗಿ ಅಲ್ಲಿ ಬಣ್ಣದ ಮನೆ ತಲೆಯೆತ್ತಿ ನಿಂತಿದೆ. ಮಗಳ ಮದುವೆಯಲ್ಲಿ ಹೊಸ ಮಲ್ಲು ದೋತಿ ಉಟ್ಟು ಸಂಭ್ರಮದಿಂದ ಓಡಾಡುತ್ತಿದ್ದಾನೆ. ಇನ್ನೇನು ಮಗಳಿಗೆ ಅಕ್ಕಿ ಕಾಳು ಹಾಕಬೇಕು ಅನ್ನುವಷ್ಟರಲ್ಲಿ ನಿದ್ರಾದೇವತೆ ರಂಗಜ್ಜನೊಂದಿಗೆ ಮುನಿಸಿಕೊಂಡವಳಂತೆ ಓಟ ಕೀಳುತ್ತಾಳೆ.ಮಂದಹಾಸ ಬೀರುತ್ತಾ ಎದ್ದ ರಂಗಜ್ಜ ಮಗಳಿಗೆ ಎಮ್ಮೆ ಹಾಲು ಹಿಂಡಲು ಅವಸರಿಸಿದ. ಆಕೆ ಚಮತು ಮಾಡಿ ಎಲ್ಡು ಸಿಲವಾರ ತಂಬಿಗೆ ತುಂಬಾ ಹಾಲು ಕರೆದಳು. ಹಾಲು ತೆಗೆದುಕೊಂಡು ನಿತ್ಯವೂ ಕೊಡುವ ಮನೆಗಳಿಗೆ ಹಾಲು ಹಾಕಿ,“ಈ ವಾರ ಮುಂಗಾಡನ ರೊಕ್ಕ ಕೊಡ್ರೀ. ಮನಾಗ ಮುಕ್ಕು ಜ್ವಾಳದ ಕಾಳಿಲ್ಲ. ಸಂತಿ ಮಾಡಬೇಕು. ಕಿರಾಣಿ ಅಂಗಡಿ ಬಾಕಿ ಹರೀಬೇಕು” ಅಂತ ಬುರುಡಿ ಬಿಟ್ಟ. ಅವರು ಹಾಲು ತೆಗೆದುಕೊಂಡು ರಂಗಜ್ಜನ ಆಣತಿಯಂತೆ ದುಡ್ಡು ಕೊಟ್ಟರು.ರಂಗಜ್ಜ ಖುಷಿಯಿಂದ ಊರಗಲ ಮುಖ ಮಾಡಿಕೊಂಡು ಮನೆಗೆ ಬಂದ. ಹನುಮಿ ಯಾರದೊ ಹೊಲದಲ್ಲಿ ಕಳೆ ತೆಗೆಯಲು ಹೋಗಲು ಬುತ್ತಿ ಕಟ್ಟತೊಡಗಿದ್ದಳು. “ನೀನು ಹೊಲಕ್ಕ ಹೋಗು. ನಾನು ಪಟ್ಟಣಕ್ಕೆ ಹೋಗಿ ಲಾಟರಿ ತಗೊಂಡು ಬರ‍್ತೀನಿ. ಇಳಿ ಹೊತ್ತಿನ್ಯಾಗ ಒಂದೆರಡು ತಾಸು ಎಮ್ಮಿ ಮೇಸ್ತಿನಂತ. ಅಲ್ಲೇ ಬರುವಾಗ ತಲಿಮ್ಯಾಗ ಒಂದು ಹೊರಿ ಹಸೆ ಮೇವು ಹೊತುಗೊಂಡು ಬಾ” ಅಂದ.‘ಅಪ್ಪ ನಿನಗ ತಿಳಿಯಾಕಿಲ್ಲ. ಆ ಲಾಟರಿ ಗಿಟರಿ ನಂಬಬ್ಯಾಡ. ಅವು ಮೋಸದಾಟ. ಕುಡಗೋಲು ಕುಂಬಳಕಾಯಿ ಎರಡು ನಿನ್ನ ಕೈಯಾಗ ಅದಾವು. ಹ್ಯಾಂಗ ಮಾಡ್ತಿಯೋ ಏನೋ. ನಿನ್ನ ಚಿತ್ತಕ್ಕ ಬಿಟ್ಟಿದ್ದು’ ಎಂದು ಆಕಿ ಹೊಲದ ಕಡೆ ಹೆಜ್ಜೆ ಬೆಳೆಸಿದಳು.ಅವಳ ಮಾತಿಗೆ ಕ್ಯಾರೆ ಅನ್ನದ ರಂಗಜ್ಜ ಪಟ್ಟಣಕ್ಕೆ ಹೋಗಲು ಚಹಾದ ಅಂಗಡಿ ಮುಂದ ನಿಂತಿದ್ದ ಕೆಂಪು ಬಸ್ಸು ಹತ್ತಿದ. ಇಂವ ಪಟ್ಟಣಕ್ಕೆ ಹೋಗುವುದು ಕೆಲವರಿಗೆ ಅಚ್ಚರಿಯೆನಿಸಿತು. ಮನಬಿಚ್ಚಿ ಕೇಳಿಯೂ ಬಿಟ್ಟರು. ಸಂತೆ ಮಾಡಲು ಎಂದು ಹೇಳಿ ಗುಟ್ಟನ್ನು ಬಿಟ್ಟು ಕೊಡಲಿಲ್ಲ.ರಂಗಜ್ಜ ಪಟ್ಟಣಕ್ಕೆ ಬಂದಾಗ ಬಿಸಿಲಿನ ಜಳ ರಣರಣ ಹೊಡೆಯತೊಡಗಿತ್ತು. ಪಟ್ಟಣದ ಬಜಾರು ಟಾರು ರಸ್ತೆಯ ತುಂಬಾ ಜನವೋ ಜನ. ಇವರೆಲ್ಲರೂ ಲಾಟರಿಕೊಳ್ಳಲು ಬಂದಿರಬೇಕೆಂದು ಊಹಿಸಿದ. ಲಾಟರಿ ಟಿಕೇಟು ಆಗಿ ಬಿಟ್ಟಾವು ಎಂಬ ಭಯದಿಂದ ಲಾಟರಿ ಅಂಗಡಿ ಹುಡುಕಲು ಸನ್ನದ್ಧಗೊಂಡ.ಲಾಟರಿ ಮಾರುವ ಟ್ಯಾಕ್ಸಿ ಗಾಡಿಯೊಂದು ಮೈಕಿನಲ್ಲಿ ಅನೌನ್ಸು ಮಾಡುತ್ತ ರಂಗಜ್ಜನ ಕಡೆಗೇ ಬಂತು. ‘ಬಂಪರ್ ಲಾಟರಿ. ಇಂದೇ ಡ್ರಾ. ಹತ್ತು ರೂಪಾಯಿ ಟಿಕೇಟಿಗೆ ಒಂದು ಲಕ್ಷ. ಐವತ್ತು ರೂಪಾಯಿಗೆ ಒಂದು ಕೋಟಿ ರೂಪಾಯಿ ಡ್ರಾ ಇದೆ. ಅದೃಷ್ಟದ ಲಕ್ಷ್ಮೀ ನಿಮಗೆ ಒಲಿಯಲಿದ್ದಾಳೆ. ಖರೀದಿಸಿ. ಮರೆಯದೆ ಟಿಕೇಟಿನ ಜೊತೆಗೆ ಶ್ಯಾಂಪೂ ಪಡೆಯಿರಿ.’ ಎಂದು ಆ ಮೈಕು ಪಟ್ಟಣದ ಕಿವಿಯಲ್ಲಿ ಕೂಗತೊಡಗಿತ್ತು.ರಂಗಜ್ಜ ಉತ್ತೇಜನಗೊಂಡ. ಲಾಟರಿ ಹೊಡೆದವನಂತೆ ಖುಷಿಗೊಂಡ. ಒಳ ಜೇಬಿನಿಂದ ಅರವತ್ತು ರೂಪಾಯಿ ತೆಗೆದು ಹತ್ತು ಮತ್ತು ಐವತ್ತು ರೂಪಾಯಿಯ ತಲಾ ಒಂದೊಂದು ಟಿಕೇಟು, ಎರಡು ಶ್ಯಾಂಪೂ ಪಾಕೇಟ್ ಪಡೆದುಕೊಂಡು ಹಿಗ್ಗಿನಿಂದ ಊರ ಕಡೆ ನಡೆದ.ರಾತ್ರಿ ಗುಡಿಸಲದಲ್ಲಿ ಹನುಮಿ ಸೆಟಗೊಂಡು, ಆ ಎಲ್ಲ ಸಿಟ್ಟನ್ನು ಅರೆಯುತ್ತಿದ್ದ ಹಿಂಡಿಯ ಮೇಲೆ ತೀರಿಸಿಕೊಳ್ಳತೊಡಗಿದ್ದಳು. ‘ಹನುಮವ್ವ ನೋಡಿಲ್ಲಿ. ಟಿಕೇಟಿನ ಸಂಗಡ ಶ್ಯಾಂಪೂ ಕೊಟ್ಟಾರ. ಇವು ಮಲ್ಲಗಿ ಹೂವಿನಂಗ ಘಮ ಘಮ ಅಂತಾವಂತೆ. ಇನ್ನ ಲಾಟರಿಯಂತೂ ನನಗ ಹೊಡೆದ ಹೊಡೆಯುತ್ತಾ...’ಅಂತ ರಂಗಜ್ಜ ಅವಳ ಕೋಪವನ್ನು ಆರಿಸಲು ನೋಡಿದ.ಹನುಮಿ ಖುಷಿಯಾಗಿ ಚೆಂಡು ಹೂವಿನಂತೆ ಮುಖ ಅರಳಿಸಿದಳು. ಅವಳು ಟಿ.ವಿ.ಯಲ್ಲಿ ಶ್ಯಾಂಪೂ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದ ಉದ್ದ ಕೇಶರಾಶಿಯ ಚೆಲುವೆಯರನ್ನು ಕಂಡು ಮತ್ಸರ ಪಟ್ಟಿದ್ದಳು. ಸಕ್ಕರಿ, ಚಾಪುಡಿ ತರಲು ಶೆಟ್ಟರ ಕಿರಾಣಿ ಅಂಗಡಿಗೆ ಹೋದಾಗ ಅಲ್ಲಿ ಇಳಿಬಿಟ್ಟಿದ್ದ ಶ್ಯಾಂಪೂ ಚೀಟುಗಳನ್ನು ನೋಡಿದ್ದಳು. ಆದರೆ ತರಲು ಅದ್ಯಾಕೋ ಹಿಂಜರಿಕೆ ಅನಿಸಿ ಶ್ಯಾಂಪೂ ತರುವುದಕ್ಕೆ ಎಳ್ಳುನೀರು ಬಿಟ್ಟಿದ್ದಳು. ಈಗ ತಾನು ಶ್ಯಾಂಪೂ ಹಚ್ಚಿಕೊಳ್ಳುವ ಭಾಗ್ಯವನ್ನು ಈ ಲಾಟರಿ ಕರುಣಿಸುತ್ತಿರುವುದನ್ನು ಸ್ವಾಗತಿಸಿದಳು. ಶ್ಯಾಂಪೂವಿನ ಘಮಕ್ಕೆ ಮನಸೋತ ಅವಳ ಮನಸಿನ ಹೊಲದ ತುಂಬಾ ಕನಸಿನ ಸಸಿಗಳು ಮೊಳಯತೊಡಗಿದ್ದವು.ಇವತ್ತು ಎಂದಿಗಿಂತ ಬೇಗನೆ ಎದ್ದು ಕಸ ಮುಸುರೆ ಮಾಡಿದ ಹನುಮಿ ಜಳಕ ಮಾಡಲು ಒಲೆಯ ಮೇಲೆ ಗಡಗಿಯಲ್ಲಿ ನೀರು ಕಾಯಿಸಲು ಇಟ್ಟಳು. ಅವಳಿಗೆ ಶ್ಯಾಂಪೂ ಹಚ್ಚಿಕೊಳ್ಳುವ, ಅದರ ಘಮ ಸವಿಯುವ ಕುತೂಹಲ ಒಳಗೊಳಗೆ ಹೆಡೆಯಾಡತೊಡಗಿತ್ತು.ನಿನ್ನೆ ಕೊಂಡಿರುವ ಲಾಟರಿ ಕತೆ ಏನಾಗಿದೆ ಅನ್ನುವುದನ್ನು ಮನಗಾಣಲು ರಂಗಜ್ಜ ಪತ್ರಿಕೆ ನೋಡಲು ಚಹಾದಂಗಡಿ ಕಡೆ ಹೋಗಲು ಮುಂದಾದ. ಹನುಮಿ ತಲೆಗೆ ನೀರು ಹನಿಸಿಕೊಂಡು ಅಂಗೈಯಲ್ಲಿ ಶ್ಯಾಂಪೂ ಹಾಕಿಕೊಂಡು ಕೂದಲಿಗೆ ಸವರಿದಾಗ ಏಳುವ ನೊರೆಯಾದ ಬುರುಗು ಅವಳನ್ನು ಆಹ್ಲಾದಗೊಳಿಸಿತ್ತು. ಅದ್ಯಾಕೊ ಎದುರು ಮನೆಯ ದನ ಕಾಯುವ ಸುಬ್ಬ ನೆನಪಾದ. ಅವಳು ಮೈ ತುಂಬಾ ಮಾದಕತೆ ತುಂಬಿಕೊಂಡು ಮಧುರ ಯಾತನೆಯಿಂದ ನರಳತೊಡಗಿದಳು. ಮೊದಲ ಮಳೆಗೆ ಸಿಕ್ಕ ಮಣ್ಣಿನ ಹೆಂಟೆಯಂತೆ ಅರಳತೊಡಗಿದಳು. ‘ಆ’ ಭಾಗ್ಯ ತನಗೆ ಅದ್ಯಾವಗ ಒಲಿಯುವುದೊ ಎಂದು ಮನಸಲ್ಲಿ ಮಂಡಿಗೆ ತಿನ್ನುತ್ತಾ ವಿರಹ ವೇದನೆಯಿಂದ ಬಳಲತೊಡಗಿದಳು.ರಂಗಜ್ಜ, ಪಂಚಾಯಿತಿ ಸಿಪಾಯಿ ಸಂಗನಿಗೆ ಲಾಟರಿಕೊಟ್ಟು ಪತ್ರಿಕೆಯಲ್ಲಿ ತನ್ನ ನಂಬರು ಹತ್ತಿರುವುದನ್ನು ಖಾತ್ರಿ ಮಾಡಿಕೊಳ್ಳಲು ನೋಡಿದ. ಚಹಾದಂಗಡಿಯಲ್ಲಿ ನೆರೆದಿದ್ದ ಜನರೆಲ್ಲರೂ ಕುತೂಹಲದಿಂದ ಅದನ್ನೆ ದಿಟ್ಟಿಸತೊಡಗಿದ್ದರು. ಸಂಗ ಹುಡುಕಿ ನೋಡಿದ. ಆ ನಂಬರ್ ಎಲ್ಲೂ ಕಾಣುತ್ತಿಲ್ಲ. ರಂಗಜ್ಜ ಪೇಚು ಮಾರಿ ಹಾಕಿಕೊಂಡು ಗುಡಿಸಲು ಕಡೆ ಹೆಜ್ಜೆ ಕಿತ್ತ.ರಂಗಜ್ಜ ಹಾಲು ಮಾರಿದ ಹಣವನ್ನು ನೀರಿನಂತೆ ಲಾಟರಿಗೆ ಖರ್ಚು ಮಾಡತೊಡಗಿದ. ಲಾಟರಿ ಲಕ್ಷ್ಮೀ ಇನ್ನೂ ಇವನಿಗೆ ಒಲಿದಿಲ್ಲ. ರಂಗಜ್ಜ ಮಾತ್ರ ನಿತ್ಯವೂ ಪ್ಯಾಟೆಗೆ ಹೋಗಿ ಲಾಟರಿ ತರುವುದನ್ನು ವ್ರತದಂತೆ ಪಾಲಿಸತೊಡಗಿದ. ಹನುಮಿ ತಪ್ಪದೆ ದಿನವೂ ಶ್ಯಾಂಪೂ ಹಚ್ಚಿಕೊಂಡು ಜಳಕ ಮಾಡುತ್ತಾಳೆ. ತಲೆಗೆ ಹನಿಸಿಕೊಂಡಾಗ ಬೀಳುತ್ತಿದ್ದ ನೀರಲ್ಲಿ ಸಣ್ಣಗೆ ಜಿನುಗುತ್ತಿದ್ದ ಅವಳ ಕಣ್ಣೀರು ಯಾರಿಗೂ ಕಾಣದೆ ಹೋದವು.
-ಟಿ. ಎಸ್. ಗೊರವರ

Sunday, February 7, 2010


ಮನಸು ಬೆವರುತ್ತಿದೆ


ಮಳೆ ಸುರಿದರೆ ಅವಳ ನೆನಪು ಕಾಡುತ್ತಿತ್ತು

ವಸಂತ ಎದೆಯೊಳಗೆ ಕಾಲ್ಗೆಜ್ಜೆಯ ಗಲ ಗಲಿಸುತ್ತಿದ್ದ.


ಈಗ ಮಳೆಯಾದರೆ ಮನಸು ಬೆವರುತ್ತಿದೆ

ಬದುಕು ತೇಲಿ ಹೋದವರ ನೋವಿನಲಿ

ಅವಳ ವಿಳಾಸ ಕಳೆದು ಹೋಗಿದೆ

ವಸಂತನ ಕಾಲ್ಗೆಜ್ಜೆ ಉದುರಿ ಹೋಗಿದೆ.


-ಟಿ.ಎಸ್. ಗೊರವರ

Friday, February 5, 2010


ಎದೆ ಮಿಡಿತದ ಸದ್ದು
ನಾನು ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ. ಬದುಕಿನ ಹೊಸಿಲ ಒಳಗಡೆ ಇರುವಾಲೇ ನನ್ನ ಚೊಚ್ಚಲ ಕಥಾಸಂಕಲನ ಪ್ರಕಟಿಸಿ ನಿಮ್ಮ ಬೊಗಸೆಯಲ್ಲಿ ಇಡುತ್ತಿರುವುದಕ್ಕೆ ಖಷಿ ಆಗುತ್ತಿದೆ.
ನನಗೆ ಕತೆ ಬರೆಯುವುದೆಂದರೆ ಪ್ರಯಾಸದ ಕೆಲಸ. ಪದಜೋಡಣೆ ಮಾಡುವುದು ಗುಬ್ಬಿ ಹುಲ್ಲಿನ ದಳಗಳನ್ನು ಸೇರಿಸಿ ಗೂಡು ಕಟ್ಟುವ ಹಾಗೆ ತ್ರಾಸದಾಯಕ. ಬಳಸುವ ಪ್ರತಿ ಪದವೂ ಜೀವಂತಿಕೆಯಿಂದ ಉಸಿರಾಡಬೇಕು ಅನ್ನುವವನು ನಾನು. ನನ್ನ ವಾರಿಗೆಯ ಗಳೆಯರೆಲ್ಲಾ ಎಂಜಾಯ್ ಮಾಡುವುದರಲ್ಲಿ ತಲ್ಲೀನರಾಗಿದ್ದರೆ, ನಾನು ಪುಸ್ತಕದ ಪುಟಗಳಲ್ಲಿನ ತರಹೇವಾರಿ ಶಬ್ದಗಳ ಹುಡುಕುವ ಆಟದಲ್ಲಿ ಧ್ಯಾನಸ್ಧನಾಗಿರುತ್ತಿದ್ದೆ.ಗೆಳೆಯರು ಆಗಾಗ ಪ್ರಶ್ನೆ ಮಾಡುತ್ತಾರೆ. ನಿನಗೆ ಕತೆ ಬರೆಯಲು ಏನು ಪ್ರೇರಣೆ ಅಂತ. ನನಗೆ ಕತೆ ಬರೆಯಲು ಪ್ರೇರಣೆ ನೀಡಿದ್ದು ಅಪ್ಪ ಮತ್ತು ಅವ್ವ ಬಿಡುತ್ತಿದ್ದ ನಿಟ್ಟುಸಿರ ಮಾತುಗಳು. ಪ್ರತಿ ರಾತ್ರಿ ಊಟ ಮಾಡುವ ಹೊತ್ತಿಗೆ ಅಪ್ಪ, ತಾನು ಅದೆಷ್ಟೊಂದು ದುಡಿದರೂ ಇನ್ನೂ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುವ ಬಡತನ ಸಾಲದ ಭಾದೆಯನ್ನು ಕಣ್ಣಲ್ಲಿ ನೀರು ಜಿನುಗುವಂತೆ ಕತೆಯಂತೆ ಹೇಳುತ್ತಿದ್ದ. ಆತನ ಎಲ್ಲ ಮಾತುಗಳು ನೋವಿನ ಮಳೆಯಲ್ಲಿ ತೊಯ್ದಿರುತ್ತಿದ್ದರೂ, ಆತನ ಬತ್ತದ ಜೀವನೋತ್ಸಾಹ ನನ್ನಲ್ಲಿ ಅಚ್ಚರಿ ಮೂಡಿಸುತ್ತಿತ್ತು. ಅವ್ವನೂ ಕೂಡ ಅದ್ಯಾವತ್ತು ಚಂದಿರನನ್ನು ತೋರಿಸಿ, ಹಾಡು ಹೇಳಿ ನನ್ನನ್ನು ರಮಿಸಲಿಲ್ಲ. ನಾನು ಹಿರಿಯ ಮಗನಾದ್ದರಿಂದ ತನ್ನೆಲ್ಲ ಅವಮಾನಗಳನ್ನು ಕತಾನಾಯಕಿಯ ಸ್ವಗತದಂತೆ ಹೇಳುತ್ತಿದ್ದಳು. ಇವು ನನಗೆ ಕತೆ ಕಟ್ಟುವ ಕಲೆಗೆ ಪ್ರೇರಣೆ ನೀಡಿವೆ ಅಂತ ಅನಿಸುತ್ತಿದೆ.
ಹಳ್ಳಿ ಬದುಕಿನ ನೈಜ ಚಿತ್ರಣಗಳನ್ನು, ಹಳ್ಳಿಯಲ್ಲಿ ಹೆಜ್ಜೆ ಇಟ್ಟಿರುವ ಜಾಗತೀಕರಣದ ವಿರೂಪತೆಯನ್ನು, ನನ್ನೆದೆಯ ತವಕ, ತಲ್ಲಣಗಳನ್ನು ಕತೆಯಾಗಿಸುವ ಅದಮ್ಯ ತುಡಿತದೊಂದಿಗೆ ಕತೆ ಬರೆಯುತ್ತಿದ್ದೇನೆ. ನನ್ನೆಲ್ಲ ಕತೆಗಳನ್ನು ನಿಮ್ಮೆದುರಿಗೆ ಹರವಿದ್ದೇನೆ. ಸಹೃದಯಿಗಳಾದ ತಾವು ಓದಿ ಪ್ರತಿಕ್ರಿಯಿಸುತ್ತೀರೆಂದು ಭಾವಿಸಿದ್ದೇನೆ.
-ಟಿ.ಎಸ್. ಗೊರವರ

ಕುರಿ ಕಾಯೊ ರಂಗನ ಕತೆ
- ಟಿ.ಎಸ್.ಗೊರವರ
ಕಾರಬಾರಿ ಮಲ್ಲಪ್ಪನ ಎರಿ ಹೊಲದಾಗ ಹಾಕಿದ್ದ ಕುರಿಗಾರ ಭೀಮಪ್ಪನ ಕುರಿ ಹಟ್ಟಿಯ ಸುತ್ತ ಕತ್ತಲು ಗಸ್ತು ಹೊರಟಿತ್ತು.
ಜರಿಯಾಗಿ ಸುರಿಯತೊಡಗಿದ್ದ ಕತ್ತಲೊಳಗೆ ಧ್ಯಾನಸ್ಥವಾಗಿ ಗಾಳಿ ಮೆಲ್ಲಗೆ ತನ್ನ ಸೆರಗು ಬೀಸತೊಡಗಿತ್ತು. ಆಗೊಂದು ಈಗೊಂದು ಮಿಂಚು, ಗುಡುಗು ಕಣ್ಣಗಲಿಸಿ ಕುರಿ ಹಟ್ಟಿಯ ನೋಡಿ ಕಣ್ತುಂಬಿಕೊಂಡು ಮಾಯವಾಗುತ್ತಿದ್ದವು. ಹಟ್ಟಿಯೊಳಗೆ ಕುರಿಗಳು ಮೆಲಕು ಹಾಕುತ್ತಾ ಅದೇನನ್ನೊ ಧ್ಯಾನಿಸುತ್ತಾ ಮಲಗಿದ್ದವು. ಹಟ್ಟಿಯೂ ಆ ಧ್ಯಾನದೊಳಗೆ ಮಗ್ನವಾದಂತೆ ತೋರತೊಡಗಿತ್ತು.
ಕ್ಷಣ ಹೊತ್ತು ಕಳೆದಿರಬಹುದು. ಬೆದೆ ಬಂದ ಕುರಿಯನ್ನು ಟಗರು ಬೆನ್ನು ಹತ್ತಿ ಹಟ್ಟಿಯ ತುಂಬಾ ಅಲೈ ಬುಲೈ ಆಡಿಸತೊಡಗಿತ್ತು. ಹಟ್ಟಿಗೆ ಜೀವ ಬಂದಂಗಾತು. ಕತ್ತಲೊಳಗೆ ಕುರಿ ಚಹರೆ ಸರಿಯಾಗಿ ತೋರದಿದ್ದರೂ ಎದೆಯಾಗಿನ ವಿರಹದುರಿಗೆ ಗಾಳಿ ಬೀಸಿದಂಗಾಗಿ ಅದು ಮತ್ತಷ್ಟು ಹೊತ್ತಿಕೊಂಡು ತಡೆದುಕೊಳ್ಳದ ಟಗರು ಕುರಿಗೆ ತುಟಿಮುತ್ತು ಕೊಡಲು ಹವಣಿಸತೊಡಗಿತ್ತು. ಕುರಿಯ ದುಬ್ಬದ ಮ್ಯಾಲೆ ಟಗರು ಕಾಲು ಹಾಕಿದಂತೆಲ್ಲಾ ಕುರಿ ತಪ್ಪಿಸಿಕೊಳ್ಳುವುದು ನಡದೇ ಇತ್ತು. ಇವೆರಡರ ಅಪ್ಪ, ಅವ್ವನ ಆಟದಿಂದಾಗಿ ಆದೆಷ್ಟೋ ದಿನದಿಂದ ಮಾತು ಕಳೆದುಕೊಂಡವನಿಗೆ ಮತ್ತೆ ಮಾತು ಮರುಕಳಿಸಿದ ಗೆಲವು ಹಟ್ಟಿಯೊಳಗೆ ಮೂಡತೊಡಗಿತ್ತು.
ಹಟ್ಟಿಯ ಸುತ್ತ ಕಾವಲು ಕಾಯಲು ಅಲ್ಲೊಬ್ಬರು ಇಲ್ಲೊಬ್ಬರು ಕುರಿ ಕಾಯುವ ಆಳುಗಳು ಮಲಗಿ ಗೊರಕೆ ತೆಗೆದಿದ್ದರು. ಕುರಿಗಳ ಗದ್ದಲದ ಬ್ಯಾ ಎನ್ನುವ ದನಿ ಆಳು ರಂಗನ ಕಿವಿಗಪ್ಪಳಿಸಿ ಬೆಚ್ಚಿಬಿದ್ದ. ತ್ವಾಳ ಬಂದಿರಬಹುದೆಂದು ಮನದಲ್ಲಿ ಎಣಿಕೆ ಹಾಕಿದ. ಗಾಳಿ ಸಣ್ಣಗೆ ಸೆರಗು ಬೀಸತೊಡಗಿದ್ದರೂ ಕುದಿಗೊಂಡ. ಕುರಿ ಮಾಲಕನ ಮೈ ತುಂಬಾ ಬಾಸುಂಡೆ ಏಳುವಂತೆ ಹೊಡೆಯುವ ಹೊಡೆತ, ಸೊಂಟದ ಕೆಳಗಿನ ಅವಾಚ್ಯ ಬೈಯ್ಗಳ ನೆಪ್ಪಾಗಿ ಮೈಯೆಲ್ಲಾ ಬೆವತು ನಡುಗತೊಡಗಿದ. ರಂಗನ ಕಣ್ಣೊಳಗಿನ ನಿದ್ದೆ ಆಗಲೇ ಮಾರು ದೂರ ಓಟಕಿತ್ತಿತ್ತು. ಕಂದೀಲ ಬುಡ್ಡಿಯನ್ನು ತುಸು ಎತ್ತರಿಸಿ ಹಟ್ಟಿಯೊಳಗೆ ಬೆಳಕು ಮಾಡಿ ಇಣುಕಿ ನೋಡಿದ. ರಂಗನ ನಿರೀಕ್ಷೆ ಹುಸಿಗೊಂಡಿತ್ತು. ಅವನ ಮುಖದ ಮ್ಯಾಲೆ ಹೊನ್ನಂಬರಿ ಹೂವಿನಂತ ನಗೆ ಅರಳಿ ಲಾಸ್ಯವಾಡಿತು. ತ್ವಾಳ ಬಂದಿರಬಹುದೆಂದು ಭಾವಿಸಿ ಭಯಗೊಂಡು ನಿದ್ದೆ ಕೊಡವಿಕೊಂಡು ಎದ್ದ ರಂಗನಿಗೆ ಹೋದ ಜೀವ ಬಂದಂಗಾಗಿ ನಿರಾಳವೆನಿಸಿ ಮತ್ತೆ ಕೌದಿಯೊಳಗೆ ತೂರಿಕೊಂಡು ಮೈ ಚಾಚಿದ.
ಮಲಗಿರುವ ರಂಗನಿಗೆ ಇನ್ನೂ ನಿದ್ದೆಯ ಜೊಂಪು ಹತ್ತಿರಲಿಲ್ಲ. ಮಳೆ ಹನಿ ಹನಿಯಾಗಿ ಒಂದೇ ಸಮನೆ ಹುಯ್ಯತೊಡಗಿತ್ತು. ಬಯಲನ್ನೇ ಮನೆ ಮಾಡಿಕೊಂಡಿದ್ದ ಕುರಿ ಆಳುಗಳ ಎದೆಯೊಳಗೆ ಕ್ಷಣ ಹೊತ್ತು ಆತಂಕ ಹೆಡೆಯಾಡಿತು. ಇದ್ದೊಂದ್ದು ಹಾಳಿ ಚೀಲವನ್ನು ತಲೆಯ ಮ್ಯಾಲೆ ಹೊದ್ದುಕೊಂಡು, ಅದರೊಳಗೆ ಗುಡಿಸಿಕೊಂಡು ಕುಳಿತರು. ಈಗ ಮನಸ್ಸು ನೆಮ್ಮದಿಯ ಉಸಿರು ಬಿಡತೊಡಗಿತ್ತು. ಮಳೆ ಮಾತ್ರ ಇದ್ಯಾವುದರ ಪರಿವೇ ಇಲ್ಲದೆ ಹಾಳಿ ಚೀಲದ ಮ್ಯಾಲೆ ಮನಸ್ಸಿಗೆ ಬಂದಂತೆ ಹುಯ್ಯತೊಡಗಿತು. ಹಟ್ಟಿಯೊಳಗೆ ಕುರಿಗಳು ಗುಂಪುಗೂಡಿ ಒಂದರ ಬುಡಕ್ಕೊಂದು ತಲೆ ತೂರಿ ಮಳೆಗೆ ಮೈಯೊಡ್ಡಿ ನಿಂತಿದ್ದವು.
ತಾಸು ಹೊತ್ತು ಬಿಟ್ಟು ಬಿಡದೆ ಜಡಿದ ಮಳೆ ದಣಿವಾರಿಸಿಕೊಳ್ಳಲು ತನ್ನ ಗುಡಿಸಲ ಕಡೆ ಪಾದವ ಬೆಳೆಸಿತು. ಮಳೆ ವರಪುಗೊಂಡಿದ್ದೆ ತಡ, ಕುರಿ ಆಳುಗಳು ಖುಷಿಗೊಂಡವು. ಬೆಳಕು ಹರಿಯಲು ಇನ್ನೂ ವ್ಯಾಳೆ ಬಾಳ ಇದ್ದುದರಿಂದ ಅವರ ಹಣೆಯ ಮ್ಯಾಲೆ ಚಿಂತೆಯ ಗೆರೆಗಳು ಮೂಡಲು ಸ್ಪರ್ಧೆಗಿಳಿದವು. ಕಣ್ಣೊಳಗೆ ನಿದ್ದೆ ಸುಳಿದಿರುಗಿ ಮಲಗಲು ಮನಸು ಹಟ ಹಿಡಿಯಿತು. ಮಲಗಬೇಕೆಂದರೆ ಎರಿ ಹೊಲದ ಮಣ್ಣು ರಜ್ಜಾಗಿ ಕಿತಿ ಕಿತಿ ಅನ್ನತೊಡಗಿತ್ತು. ಬೆಳಕು ಹರಿಯುವ ತನಕ ಕುಕ್ಕರಗಾಲಲ್ಲಿ ಕುಳಿತು ಕಾಲ ಕಳೆಯುವುದನ್ನು ನೆಪ್ಪಿಸಿಕೊಂಡು ದಿಗಿಲುಗೊಂಡರು. ಮಳೆಯಿಂದಾಗಿ ಥಂಡಿ ಗಾಳಿ ಬೀಸಿ ಬಂದು ಮೈ ಸವರಿ ನಡುಗಿಸತೊಡಗಿತು. ತಲಾ ಒಂದೊಂದು ಚಪ್ಪಡಿ ಬೀಡಿ ಸೇದಿ ಎದೆ ಬೆಚ್ಚಗೆ ಮಾಡಿಕೊಂಡು ಕುಳಿತ ಭಂಗಿಯಲ್ಲಿ ತೂಕಡಿಸತೊಡಗಿದರು.ದೀಡು ತಾಸು ಕಳೆದಿರಬಹುದು. ರಂಗ ತಲೆಯ ಮ್ಯಾಲೆ ಹೊದ್ದುಕೊಂಡಿದ್ದ ಹಾಳಿ ಚೀಲ ತೆಗೆದು ಆಕಾಶ ದಿಟ್ಟಿಸಿದ. ಮೈ ತುಂಬಾ ದೀಪದ ಅಂಗಿ ತೊಟ್ಟು ಸಿಂಗಾರಗೊಂಡಿದ್ದ ಬೆಳ್ಳಿ ಚಿಕ್ಕಿ ಮೂಡತೊಡಗಿತ್ತು. ತನ್ನ ದಿನಚರಿ ನೆಪ್ಪಾಗಿ ನಿದ್ದೆ ಕೊಸರಿದ.
ಅವತ್ತು ರಂಗನದು ದಿನಪೂರ್ತಿ ಹಟ್ಟಯೊಳಗೆ ಉಳಿಯುವ ಮರಿಗಳಿಗೆ ತಪ್ಪಲು ತರುವ ಪಾಳಿ ಇತ್ತು. ಅಂವ ಕೋತ, ಕೊಡಲಿ ತಗೊಂಡು ತಪ್ಪಲು ತರಲು ಹೆಜ್ಜೆ ಬೆಳೆಸಿದ. ಗೌಡರ ಹೊಲದ ಹತ್ತಿರ ಬಂದಾಗ ಒಳಗೊಳಗೆ ದಿಗಿಲು ಮಿಸುಗಾಡತೊಡಗಿತು."ಆಗ್ಲೆ ಬೆಳಕು ಹರಿಯಾಕತ್ತೈತಿ. ಇನ್ನೇನು ಗೌಡ್ರ ಹೊಲಕ್ಕ ಯಾರಾದ್ರೂ ಬಂದ್ರು ಬರಬಹುದು. ಅವ್ರು ಬರೋದ್ರೊಳ್ಗ ತಪ್ಪಲು ಕೊಯ್ಕೊಂಡು ಇಲ್ಲಿಂದ ಕಾಲ್ಕೀಳಬೇಕು. ತಪ್ಲ ಕೊಯ್ಯಾಗ ಏನರ ಸಿಕ್ಕ ಬಿದ್ರ ನನ್ನ ಚರ್ಮಾನ ಸುಲಿತಾರವ್ರು….’ ಎಂದು ರಂಗ ಮನಸೊಳಗೆ ಮಾತಾಡಿಕೊಂಡ.
ಬದುವಿನಲ್ಲಿ ಬೆಳೆದು ಹಚ್ಚಗೆ ನಗತೊಡಗಿದ್ದ ಬೇವಿನ ಗಿಡ, ಬನ್ನಿಗಿಡ, ಕರಿಜಾಲಿ, ಬಾರಿಗಿಡದ ತಪ್ಪಲನ್ನು ಅವಸರದಿಂದ ಕೊಯ್ದುಕೊಂಡು, ವಜ್ಜೆ ಹೊರೆಯನ್ನು ತಲೆ ಮ್ಯಾಲೆ ಹೊತ್ತು ಹಟ್ಟಿಯ ಕಡೆ ಮುಖ ಮಾಡಿದ.
ತಲೆ ಮ್ಯಾಲಿನ ತಪ್ಪಲದ ಹೊರೆ ಹೆಣ ಭಾರವಾಗಿ ಹಟ್ಟಿ ಅದ್ಯಾವಾಗ ಬಂದಿತೋ ಅನಿಸತೊಡಗಿತ್ತು. ಮುಂಜಾನೆಯ ಥಂಡಿಯಲ್ಲೂ ಗಂಟಲು ಒಣಗಿ ಉಗುಳು ಅಂಟಂಟಾಗಿ ಹಿಂಸೆಯಾಗತೊಡಗಿತ್ತು. ಮೈಯಲ್ಲಿ ಬೆವರಿನ ಉಟೆ ಕೀಳತೊಡಗಿತ್ತು. ಸಣ್ಣಗೆ ತಂಗಾಳಿ ಬೀಸಿ ಬಂದು ಮೈ ಸವರಿದಾಗ ಕೊಂಚ ನೆಮ್ಮದಿಯಾಗುತ್ತಿತ್ತು. ಕಾಲಿನ ಮೀನ ಖಂಡದೊಳಗೆ ನೋವು ಪತರುಗುಟ್ಟತೊಡಗಿತ್ತು. ಉಸುಕಿನ ಹೊಲದಲ್ಲಿ ದಪ್ಪನೆಯ ಕೊಡ್ಡ ಕೆರವು ಮೆಟ್ಟಿದ್ದ ರಂಗನ ಕಾಲುಗಳು ಪಾದವ ಎತ್ತಿ ಇಡಬೇಕಾದರೆ ನಡುಗಿ ಹೋಗುತ್ತಿದ್ದವು. ದೋತರದ ಕಚ್ಚಿ ಸಡಿಲಗೊಂಡಿದ್ದರಿಂದ ಅದೆಲ್ಲಿ ಬಿಚ್ಚುವುದೋ ಎಂದು ಆತಂಕವಾಗಿತ್ತು.
ಅನತಿ ದೂರದಲ್ಲಿ ಹಟ್ಟಿ ಗೋಚರಿಸತೊಡಗಿತು. ರಂಗನೊಳಗೆ ಇದ್ದಕ್ಕಿದ್ದಂತೆ ಉತ್ಸಾಹದ ಸೆಲೆಯೊಡೆಯಿತು. ತಲೆ ಮ್ಯಾಲಿನ ಹೊರೆಯನ್ನು ಹಟ್ಟಿಯ ಹತ್ತಿರ ರಭಸದಿಂದ ಒಗೆದ. ತಪ್ಪಲು ನೋಡಿದ ಕುರಿಗಳು ದೃಷ್ಟಿಯನ್ನು ಚೂಪುಗೊಳಿಸಿದವು. ತಲೆ ಮ್ಯಾಲಿನ ಯಮಭಾರ ಹಗುರಾದಂತಾಗಿ ರಂಗನಿಗೆ ನಿರಮ್ಮಳವೆನಿಸಿತು. ಕ್ಷಣ ಹೊತ್ತು ಕಾಲು ಚಾಚಿ ಹಟ್ಟಿಗೆ ಆತುಕೊಂಡು ಕುಳಿತ. ಮೈಯೊಳಗೆ ನಿಧಾನವೆನಿಸಿತು. ತಂಬಿಗೆ ನೀರು ಕುಡಿದ. ಎದೆಯೊಳಗೆ ಖುಷಿ ಕುಣಿದಂತಾಯಿತು.
ಜೊತೆಗಾರರು ಒಂದು ಅಳತೆಯ ಮೂರು ಕಲ್ಲನ್ನು ನೀಟಾಗಿ ಜೋಡಿಸಿ ಒಲೆ ಮಾಡಿ, ಅದರೊಳಗೆ ತೊಗರಿ ಕಟ್ಟಿಗೆ ಇಟ್ಟು ಉರಿ ಹಚ್ಚಿ ಜ್ವಾಳದ ಸಂಕಟಿ ಮಾಡಿ, ಕುರಿ ಹಾಲು ಕಾಸುತ್ತಿರುವುದನ್ನು ದಿಟ್ಟಿಸಿದ. ರಂಗನ ಹೊಟ್ಟೆ ಹಸಿದು ಕರಡಿ ಮಜಲು ಬಾರಿಸತೊಡಗಿತ್ತು. ತಲಾಗೊಂದೊಂದು ಪರಾತ ಅಗಲದ ತಾಟು ತಗೊಂಡು, ತಾಟಿನ ತುಂಬಾ ಸಂಕಟಿ ಹಾಲು ಹಾಕ್ಕೊಂಡು ಗಡದ್ದಾಗಿ ಉಂಡರು. ಮ್ಯಾಲೆ ಒಂದೊಂದು ತಾಟು ಹಾಲು ಕುಡಿದು ತೇಗು ಬಿಟ್ಟರು.
ಕುರಿ ಮೇಯಲು ಬಿಡುವ ಹೊತ್ತಾದ್ದರಿಂದ ರಂಗನ ಜೊತೆಗಾರರು ಹಟ್ಟಿಯ ತಡಿಕೆ ತೆಗೆದು ಕುರಿಗಳನ್ನು ಹೊರಗೆ ಬಿಟ್ಟರು. ಧೋತರವನ್ನು ಜೋಳಿಗೆಯಂತೆ ಮಾಡಿ ಅದರೊಳಗೆ ಬುತ್ತಿ ಇಟ್ಟುಕೊಂಡು, ಹೆಗಲಿಗೊಂದು ಕಂಬಳಿ ನೇತು ಹಾಕ್ಕೊಂಡು ಕುರಿ ಕಾಯಲು ಸಜ್ಜುಗೊಂಡು ಗುಡ್ಡದ ಕಡೆ ಹೊರಟರು.
*******
ದೂರದಲ್ಲಿ ಕೆರಗೆ ಹೋಗಿ ನೀರು ತಂದ ರಂಗ ಮರಿಗಳಿಗೆ ಕುಡಿಸಿ ಹಟ್ಟಿ ತಡಿಕೆಗೆ ತಪ್ಪಲು ನೇತು ಬಿಟ್ಟ. ತಪ್ಪಲು ತಿಂದ ಮರಿಗಳು ಹಟ್ಟಿಯೊಳಗೆ ಚಿನ್ನಾಟಿಗೆ ತೆಗೆದಿದ್ದವು. ಒಂದೊಂದು ಮರಿಗಳನ್ನು ಹಿಡಿದು ಅವುಗಳ ಮೈ ಮ್ಯಾಲೆ ಪೊದೆಯಾಗಿ ಬೆಳೆದ ಕೂದಲನ್ನು ಕತ್ತರಿಯಿಂದ ನೀಟಾಗಿ ಕತ್ತರಿಸತೊಡಗಿದ. ಕಿವಿಸಂದಿ, ತೊಡೆಸಂದಿಗಳಲ್ಲಿ ಸಂಸಾರ ಹೂಡಿದ್ದ ಉಣ್ಣೆಗಳನ್ನು ಕಿತ್ತು ಕಲ್ಲಿಗೆ ಒರೆಯುವ ಕಾಯಕ ನಡೆಸಿದ. ಒರೆದಾಗ ಉಣ್ಣೆಯ ಹೊಟ್ಟೆಯಿಂದ ಬರುವ ರಕ್ತದಿಂದ ಅಂವ ಕಲ್ಲ ಮ್ಯಾಲೆ ಎಳೆದ ಗೆರೆಗಳು ಬಿಸಿಲಿಗೆ ಒಣಗಿ ನವ್ಯ ಕಲಾಕೃತಿ ಹಾಂಗ ಗೋಚರಿಸತೊಡಗಿದ್ದವು.
ಮರಿಗಳ ಕರಾಪು ಮಾಡಿ ಅವುಗಳೊಗೆ ಉತ್ಸಾಹ ತುಂಬಿದ ರಂಗ ತಪ್ಪಲು ಆದಾಗೊಮ್ಮೆ ತಪ್ಪಲು ನೇತು ಬಿಡುತ್ತಾ, ನೀರು ಕುಡಿಸುತ್ತಾ ಅವುಗಳ ದೇಖರೇಖಿ ಮಾಡುವುದರೊಳಗೆ ಸಂಜೆಯ ಮುಗಿಲು ಉಣ್ಣೆಯ ರಕುತ ಬಳಿದುಕೊಂಡಿತ್ತು.ಇಡೀ ದಿನ ಉಲ್ಲಾಸದಿಂದ ಪ್ರತಿ ಕ್ಷಣಗಳನ್ನು ಮರಿಗಳ ದೇಖರೇಖಿಯಲ್ಲಿ ಕಳೆದ ರಂಗನಿಗೆ ಅದ್ಯಾಕೊ ಸುಸ್ತೆನಿಸತೊಡಗಿತ್ತು. ತಲೆಯೊಳಗೆ ಗುಡ್ಡದ ಕಲ್ಲು ಕುಂತಂಗಾಗಿ ಭಾರವೆನಿಸತೊಡಗಿತ್ತು. ಕೈ ಕಾಲುಗಳು ಸೋತಂತೆನಿಸಿ, ಬಾಯೊಳಗೆ ಉಪ್ಪುಪ್ಪು ನೀರು ಆಡತೊಡಗಿತು. ಮೈ ಮುಟ್ಟಿ ನೋಡಿಕೊಂಡ. ಅದು ಕಾದ ಹಂಚಾಗಿತ್ತು. ಮರಿಯೊಂದು ರಂಗನ ದುಬ್ಬದ ಮ್ಯಾಲೆ ಕಾಲು ಕೊಟ್ಟು ನಿಲ್ಲುವುದು, ಓಡುವುದು ಮಾಡತೊಡಗಿತ್ತು. ಕೆಂಡದ ಬಣ್ಣಕ್ಕೆ ತಿರುಗಿದ್ದ ಭಾರವಾದ ಕಣ್ಣುಗಳಿಂದ ಮರಿಯನ್ನು ದಿಟ್ಟಿಸಿ ಪ್ರೀತಿ ತೋರಿದ.
ಮೈಯೊಳಗೆ ಥಂಡಿ ಹೊಕ್ಕಂಗಾಗಿ ಮೈಯಂತ ಮೈಯೆಲ್ಲ ನಡುಗತೊಡಗಿತು. ಮೈತುಂಬಾ ಕೌದಿ ಹೊದ್ದ ಕುಳಿತ. ಕುರಿ ಮೇಸಲು ಹೋಗಿದ್ದ ಜೊತೆಗಾರರು ಕೌದಿ ಹೊದ್ದ ರಂಗನ ಅವತಾರ ನೋಡಿ ದಿಗಿಲುಗೊಂಡರು. ಇವನನ್ನು ಮನಿಗೆ ಕಳುಹಿಸಿ ಅಲ್ಲಿ ಡಾಕ್ಟರರಿಗೆ ತೋರಿಸಿದರಾಯಿತೆಂದು ಗೆಣಿಕೆ ಹಾಕಿ ಊರಿಗೆ ಕಳಿಸಲು ಜೊತೆಗಾರನೊಬ್ಬ ತಯಾರುಗೊಂಡ.ಕತ್ತಲು ಹೆಜ್ಜೆ ಹಾಕತೊಡಗಿದ್ದ ಕಳ್ಳಿದಾರಿ ಹಿಡಿದು ಇಬ್ಬರೂ ಊರ ಕಡೆ ಮುಖ ಮಾಡಿದರು. ರಂಗನ ಕಾಲುಗಳು ಕಸುವು ಕಳೆದುಕೊಂಡು ನಿತ್ರಾಣವೆನಿಸಿ ಸೋತಂತೆನಿಸತೊಡಗಿದ್ದವು. ದಾರಿಯಲ್ಲಿ ನಾಕೈದು ಸಲ ಕುಂತ. ತುಸು ಆರಾಮವೆನಿಸಿದಾಗ ಮತ್ತೆ ಪಾದ ಬೆಳೆಸಿದ. ತ್ರಾಸು ಮಾಡಿಕೊಂಡು ಊರು ತಲುಪಿದ. ರಂಗನ ಜೊತೆಗಾರನಿಗೆ ಹಟ್ಟಿಗೆ ಹೋಗಲು ಹೊತ್ತಾಗತೊಡಗಿದ್ದರಿಂದ ಅಂವ ರಂಗನನ್ನು ಊರು ಮುಟ್ಟಿಸಿ ಹಟ್ಟಿಗೆ ಹೊರಟು ಹೋದ.
ರಂಗ ಊರು ತಲುಪಿದಾಗ ಅದು ಕತ್ತಲ ಚಾದರ ಹೊದ್ದು ಕೊಂಡಿತ್ತು. ಅಲ್ಲೊಂದು ಇಲ್ಲೊಂದು ಮೆನಯಲ್ಲಿ ಬುಡ್ಡಿ ಚಿಮಣಿ ಪಿಳಿ ಪಿಳಿ ಕಣ್ಣು ಬಿಡತೊಡಗಿದ್ದವು. ಅದ್ಯಾರದೋ ಮನೆಯ ರೇಡಿಯೊದಲ್ಲಿ ರಾಜಕುಮಾರ ಹಾಡತೊಡಗಿದ್ದ. ಕುಡಿದ ವ್ಯಕ್ತಿಯೊಂದು ಜೋಲಿ ಹೊಡೆಯುತ್ತಾ, ಇಳಿಜಾರಿನಲ್ಲಿ ಬ್ರೇಕು ತಪ್ಪಿದ ಗಾಡಿಯಂತೆ ಬರತೊಡಗಿದ್ದ. ಹುಚ್ಚು ಹಿಡಿದ ಮುದುಕಿಯೊಂದು ತಿಪ್ಪೆಯ ನೆತ್ತಿಯ ಮ್ಯಾಲೆ ಕುಂತು ಅದೇನನ್ನೋ ಬಯ್ಯತೊಡಗಿತ್ತು. ರಂಗ ಹೊಸ ಲೋಕದೊಳಗೆ ಕಾಲಿಟ್ಟಂತೆ ಆ ಕಡೆ ಈ ಕಡೆ ದೃಷ್ಟಿ ಬೀರುತ್ತಾ ಮನೆ ತಲುಪಿದ.
ಮನೆಯಂದರೆ ಅದು ತೊಲೆಗಂಬದ ಮಡಿಗೆ ಮನೆಯಲ್ಲ. ಮ್ಯಾಲೆ ತಗಡು ಹೊದೆಸಿ ಸುತ್ತಲೂ ಗೋಡೆಯಂತೆ ನುಗ್ಗೆ ಕಟ್ಟಿಗೆಯ ತಡಿಕೆ ಹೆಣೆದು, ಅದಕ್ಕೆ ಸೆಗಣಿಯನ್ನು ಅಳಕು ಮಾಡಿ ಮೆತ್ತಿ, ಅದರ ಮ್ಯಾಲೆ ನೀಟಾಗಿ ಸುಣ್ಣ ಬಳೆದ ಮನೆಯದು.
ಒಳಗೆ ರಂಗನ ಅವ್ವ ದ್ಯಾಮವ್ವ ಒಲೆ ಊದುತ್ತಿರುವ ಸದ್ದು ಕೇಳಿಸತೊಡಗಿತ್ತು. ಹೊರಗಡೆ ಅದ್ಯಾರೊ ಮಾತಾಡುತ್ತಿರುವ ದನಿ ಕೇಳಿ ದ್ಯಾಮವ್ವ ಊದುಗೋಳಿ ಇಟ್ಟು ಎದ್ದು ಹೊರ ಬಂದಳು. ಕೌದಿ ಹೊದ್ದುಕೊಂಡಿರುವವನನ್ನು ನೋಡಿ ಭಯಗೊಂಡ ದ್ಯಾಮವ್ವ ಚಿಟ್ಟಿಕ್ಕು ಚೀರಿದಳು. ರಂಗ ಮೈ ಮ್ಯಾಲಿನ ಕೌದಿ ಸರಿಸಿ ಮುಖ ತೋರಿದ. ದ್ಯಾಮವ್ವನ ಎದೆಯಾಗ ಹೆದರಿಕೆಯ ಬಿರುಗಾಳಿ ಬೀಸಿದಂಗಾತು. ಮಗನಿಗೆ ಅದೇನಾಗಿದೆಯೊ ಎಂದು ಕಣ್ಣಲ್ಲಿ ನೀರು ತಂದುಕೊಂಡಳು. ಅವನ ಮೈ ಮುಟ್ಟಿ ನೋಡಿದಳು. ಎಳ್ಳು ಸಿಡಿಯುವಷ್ಟು ಬೆಚ್ಚಗಿತ್ತು. ದ್ಯಾಮವ್ವನಿಗೆ ಆತಂಕವಾಗಿ ದೊಡ್ಡ ಮಸೂತಿ ಹತ್ತಿರದ ಆರ್‌ಎಂಪಿ ಡಾಕ್ಟರ್ ಎಸ್.ಎಲ್.ಉಕ್ಕಿಸಲ ಅವರ ದವಾಖಾನಿಗೆ ತೋರಿಸಲು ಕರಕೊಂಡು ಹೋದಳು.
ಡಾಕ್ಟರು ರಂಗನನ್ನು ಚೆಕ್ಕು ಮಾಡಿ ಯಾಡು ಸೂಜಿ ಚುಚ್ಚಿ ಕ್ಷಣ ಹೊತ್ತು ಅಲ್ಲೇ ಮಲಗಿಸಿ ರೆಸ್ಟು ಮಾಡಲು ಹೇಳಿದರು. ದ್ಯಾಮವ್ವ ರಂಗನಿಗೆ ಒಂದೀಟು ತಡೆದು ಬರಲು ಹೇಳಿ, ತಾನು ಅಡಗಿ ಮಾಡುವುದಾಗಿ ಹೇಳಿ ಮನೆಗೆ ಬಂದಳು.
ಒಂದೀಟು ಹೊತ್ತಿನ ನಂತರ ಮೈ ಬಿಸಿ ಕಡಿಮೆ ಆದಂಗಾಗಿ ಆರಾಮೆನಿಸಿ ಡಾಕ್ಟರು ಕೊಟ್ಟ ಗುಳಿಗೆ ತಗೊಂಡು ಮನೆ ಕಡೆ ಹೆಜ್ಜೆ ಬೆಳೆಸಿದ.
ದವಾಖಾನಿಯಿಂದ ತಮ್ಮ ಮನೆಗೆ ಹೋಗುವ ದಾರಿ ಸಿಗದೆ ರಂಗ ಅಗಸಿವಾರಿ ಹತ್ತಿರದ ಹಾಲಿನ ಕೇಂದ್ರದ ಮುಂದೆ ಅತ್ತ ಇತ್ತ ನೋಡುತ್ತಾ ಜಾತ್ರೆಯೊಳಗೆ ಕಳೆದುಕೊಂಡ ಹುಡುಗನಂತೆ ಅಸಹಾಯಕನಾಗಿ ನಿಂತಿದ್ದ.
ಅದ್ಯಾರದೊ ಮನೆಗೆ ಪೇಸೆಂಟು ನೋಡಲು ಹೋಗಿದ್ದ ಡಾಕ್ಟರು ರಂಗನನ್ನು ನೋಡಿ ಸಿಟ್ಟಾಗಿ " ರೆಸ್ಟು ಮಾಡೋ ಮಾರಾಯ. ನೀನಿಲ್ಲೆ ನಿಂತು ಆಗಲೇ ಚೈನಿ ಹೊಡಿಯಾಕತ್ತಿ ಅಲ…’ ಎಂದರು.
ರಂಗನಿಗೆ ಏನು ಹೇಳಬೇಕೆನ್ನುವುದೇ ತಿಳಿಯಲಿಲ್ಲ. ನಿರ್ವಾ ಇಲ್ಲದೆ " ಸಾಹೆಬ್ರ, ನಮ್ಮ ಮನಿ ದಾರಿ ಯಾಕಡೆ ಅಂತ ಸ್ವಲ್ಪ ಹೇಳ್ರಿ. ನಾನು ಬಾಳ ದಿನ ಆತ್ರಿ, ಊರಿಗೆ ಬಂದೇ ಇಲ್ಲ. ಅದಕ್ಕ ನಮ್ಮನಿ ಯಾಕಡೆ ಅಂತ ಗೊತ್ತಾಗವಲ್ದು….’ ಎಂದ.
ರಂಗನ ಕಾಡುತನಕ್ಕೆ ಡಾಕ್ಟರು ಅಚ್ಚರಿಗೊಂಡರು. ಪಾಪ ಅನಿಸಿ ದಾರಿ ತೋರಿಸಿದರು. ಆ ಓಣಿಯ ದಾರಿ ಹಿಡಿದು ಮನೆಗೆ ಬಂದಾಗ ಅವರವ್ವ ಕರಸಿದ್ದಪ್ಪನ ಅಂಗಡಿಯಿಂದ ತಂದಿದ್ದ ಅಕ್ಕಿಯ ಬಿಸಿ ಅನ್ನ ಮಾಡಿ ಇಟ್ಟಿದ್ದಳು. ನಿತ್ಯ ಜ್ವಾಳದ ಸಂಕಟಿ ಉಣ್ಣುತ್ತಿದ್ದ ಅಂವ ಅನ್ನ ಉಂಡು ಅದೆಷ್ಟೋ ದಿನವಾಗಿತ್ತು. ಅವ್ವ ಬಡಿಸಿದ ಅನ್ನ, ತೊಗರಿ ಬ್ಯಾಳಿ ಸಾರು, ಅದ್ಯಾರದೊ ಮನೆಯಿಂದ ಇಸಕೊಂಡು ಬಂದಿದ್ದ ಹುಂಚಿ ಟಕ್ಕು ಸೀಪುತ್ತಾ ಊಟ ಮುಗಿಸಿ, ಗುಳಿಗೆ ತಗೊಂಡು ನಿದ್ದೆಗೆ ಜಾರಿದ.
********
ಮುಂಜಾನೆದ್ದು ರಂಗ ಅನತಿ ದೂರದ ತಿಪ್ಪೆಯಲ್ಲಿ ಉಚ್ಚೆ ಹೋದ. ಅವು ಹಳದಿ ಬಣ್ಣಕ್ಕೆ ತಿರುಗಿದ್ದವು. ರಂಗನಿಗೆ ಗಾಬರಿ ಅನಿಸಿತು. ಅದ್ಯಾವುದೋ ದೊಡ್ಡ ಜಡ್ಡು ಇದೆ ಎಂದು ಭಾವಿಸಿದ. ರಾತ್ರಿ ಡಾಕ್ಟರು ಹೇಳಿದ ಮಾತು ನೆಪ್ಪಾಗಿ ಇದು ಗುಳಿಗೆ ಮಹಿಮೆ ಎಂದುಕೊಂಡು ನಿರಮ್ಮಳನಾದ.
ಈಗ ತುಸು ಜ್ವರ ಕಡಿಮೆಯಾಗಿ ಮೈ ಹಗುರ ಅನಿಸತೊಡಗಿತ್ತು. ಮನಿ ಮುಂದೆ ಲೈಟಿನ ಕಂಬಕ್ಕಿಂತ ಎತ್ತರ ಬೆಳೆದು ನಿಂತಿದ್ದ ಬೇನಗಿಡದ ಕೊಂಗಲಿ ಮುರಕೊಂಡು ಹಲ್ಲು ತಿಕ್ಕಿದ. ಅವ್ವ ಕಾಸಿ ಕೊಟ್ಟ ಡಿಕಾಸಿ ಚಾ ಕುಡಿದ. ಬ್ಯಾರೆ ಕೆಲಸ ಇಲ್ಲದಂತಾಗಿ ಮನಿ ಕಟ್ಟಿ ಮ್ಯಾಲೆ ಕುಂತು ಆ ಕಡೆ ಈ ಕಡೆ ಹೋಗರ‍್ನ ಬರೋರ‍್ನ ಕಣ್ಣು ತುಂಬಿಕೊಂಡು, ಅವರ ಬಟ್ಟೆಬರೆ ದಿಟ್ಟಿಸಿ ವಿಸ್ಮಯಗೊಳ್ಳುತ್ತಾ ಕುಳಿತ.
ಕಾಲೇಜಿಗೆ ಹೊರಟಿದ್ದ ಹುಡುಗಿಯನ್ನು ದಿಟ್ಟಿಸಿದ. ಅದು ಚಿಕ್ಕವಳಿದ್ದಾಗಿ ಎತ್ತಿ ಆಡಿಸಿ, ಗಲ್ಲಕ್ಕೆ ಬೆಲ್ಲ ಕೊಡುತ್ತಿದ್ದ ಮಗ್ಗುಲ ಮನೆಯ ಮಂಜುಳಾ. ಆಕೆಯನ್ನು ನೋಡಿ ತುಸು ಹೊತ್ತು ಕಣ್ಣಿಗೆ ಚಕ್ರ ಬಂದಾಗಾತು. ಮೈ ಕೈ ತುಂಬಾ ಹರೆಯ ತುಂಬಿಕೊಂಡು, ನೀಟಾಗಿ ಬೈತಲೆ ತಕ್ಕೊಂಡು ಜೋಡು ಜಡೆ ಬಿಟ್ಟಿದ್ದ, ಕಡು ನೀಲಿ ಚೂಡಿದಾರ ಧರಿಸಿದ್ದ ಮಂಜುಳಾಳನ್ನು ಮತ್ತೆ ಮತ್ತೆ ನೋಡಬೇಕೆನಿಸಿತು.
ಮಾಮ ಎಂದು ಬೆನ್ನು ಬೀಳುತ್ತಿದ್ದ ಹುಡುಗಿ ಈಗ ಕ್ಯಾರೆ ಎನ್ನದೆ ಅಪರಿಚಿತಳಂತೆ ಹೋಗುತ್ತಿರುವುದನ್ನು ನೋಡಿ ಸೋಜಿಗವೆನಿಸಿತು. ಕುರಿ ಮೇಸಲು ಗುಡ್ಡಕ್ಕೆ ಹೋದಾಗ ಅಲ್ಲಿಗೆ ಕಟ್ಟಿಗೆಗೆ ಬರುತ್ತಿದ್ದ ದಾವಣಿ ಲಂಗದ ಲಂಬಾಣಿ ಹುಡುಗಿಯರನ್ನು ಮಾತ್ರ ನೋಡಿದ್ದ ರಂಗನಿಗೆ ಮಂಜುಳಾ ಜಾತ್ರೆಯಲ್ಲಿ ಆಡುತ್ತಿದ್ದ ನಾಟಕದ ಹುಡುಗಿಯಂತೆ ಮೋಹಕವಾಗಿ ತೋರಿದಳು.
ಅವಳ ಹಿಂದೆ ತಾನು ಬಸ್‌ಸ್ಟಾಂಡ್ ಕಡೆ ಹೋದ. ಅಲ್ಲಿ ಕಾಲೇಜಿಗೆ ಹೋರಡಲು ಜಮೆಯಾಗಿದ್ದ ಹುಡುಗ, ಹುಡುಗಿಯರ ದೊಡ್ಡ ಗುಂಪು ನೆರೆದಿತ್ತು. ರಂಗನಿಗೆ ತಾನು ಅದ್ಯಾವುದೋ ಮಾಯಕದ ಜಗತ್ತಿನೊಳಗೆ ಬಂದಿರುವ ಡೌಟು ಕಾಡಿತು. ಹುಡುಗಿಯರ ಗುಂಪು ದಿಟ್ಟಿಸಿದ. ಜಾತ್ರೆಯೊಳಗಿನ ತರಹೇವಾರಿ ಬಣ್ಣದ ಗೊಂಬೆಗಳಂತೆ ಕಂಡರು. ಬಣ್ಣ ಮೆತ್ತಿಕೊಂಡು ರಂಗುಗೊಂಡಿದ್ದ ಮೋಹಕ ತುಟಿ, ಅವರ ಕಣ್ಣೊಳಗಿನ ಬುಡ್ಡಿ ಚಿಮಣಿಯ ಬೆಳಕು, ಚೂಡಿದಾರದ ಎದೆಗೆ ಒದೆಯುತ್ತಿರುವ ಮೊಲೆ ರಂಗನೊಳಗೆ ಹಲಗೆ ಬಾರಿಸತೊಡಗಿದ್ದವು.
ರಂಗನ ಮಗ್ಗುಲ ನಿಂತಿದ್ದ ಕಾಲೇಜು ಹುಡುಗನೊಬ್ಬ ಮೊಬೈಲಿನ ವಿಡಿಯೋ ದಿಟ್ಟಿಸತೊಡಗಿದ್ದ. ರಂಗ ಅಚ್ಚರಿಗೊಂಡ. ಅವನೊಳಗೆ ಹುಚ್ಚಾಳಂಬೆಯಂತೆ ಪುದು ಪುದು ನೂರೆಂಟು ಪ್ರಶ್ನೆಗಳು ಎದ್ದವು. ಜೇಬಿನಲ್ಲಿಟ್ಟುಕೊಳ್ಳುವ ಟಿ.ವಿ. ಎಂದು ಭಾವಿಸಿ ಆ ಹುಡುಗನನ್ನು, ಮೊಬೈಲನ್ನು ಇನ್ನಿಲ್ಲದ ಕೂತುಹಲದಿಂದ ದಿಟ್ಟಿಸತೊಡಗಿದ.
ಕನ್ನಡ ಸಾಲೆಯ ಟೀಚರು ನಡಿಗೆಗೆ ಅವಸರ ತುಂಬಿ ರಂಗನ ಮುಂದೆ ಸುಳಿದು ಬಸ್ ಹತ್ತಲು ಹೋದರು. ಆ ಟೀಚರ್ ಮೈಯಿಂದ ಹೊರಟ ಸೇಂಟಿನ ಘಮ ರಂಗನ ಮೂಗಿನ ಹೊಳ್ಳೆ ಅರಳಿಸಿ ಸೋಜಿಗಗೊಂಡ. ಕುರಿ ಉಚ್ಚೆಯ ಗಬ್ಬು ನಾತಕ್ಕೆ ಒಗ್ಗಿ ಹೋಗಿದ್ದ ರಂಗ ಟೀಚರ್ ಮೈಯಿಂದ ಬಂದ ಘಮ ಅವರೊಳಗೆ ಅದ್ಹೇಗೆ ಬಂದಿರಬಹುದು ಎಂದು ಊಹಿಸಲು ಅಸಾಧ್ಯವೆನಿಸಿ ಮನೆಯ ದಾರಿ ತುಳಿದ.
******
ಊರಿಗೆ ಹೋಗಿ ಬಂದಾಗಿನಿಂದ ಕುರಿ ಕಾಯುವಾಗ ರಂಗನ ಮನಸು ಮೊದಲಿನಂತಿರದೆ ಅದ್ಯಾಕೊ ಒಳಗೊಳಗೆ ಭೋರಿಟ್ಟು ಅಳುತ್ತಿದೆ. ಮುಂಜಾನೆಯಾದರೆ ಸಾಕು. ಬಸ್‌ಸ್ಟ್ಯಾಂಡಿನ ಕಡೆ ಹೋಗಬೇಕೆನಿಸುತ್ತದೆ. ಬಣ್ಣದ ಗೊಂಬೆಯಂತ ಹುಡುಗಿಯರು, ಜೇಬಿನಲ್ಲಿಟ್ಟುಕೊಳ್ಳುವ ಟಿವಿ, ಟೀಚರ್ ಮೈ ಘಮ, ತಾನು ಗಲ್ಲಕ್ಕೆ ಬೆಲ್ಲ ಕೊಟ್ಟಿದ್ದ ಹುಡುಗಿ ಕನಸಾಗಿ ಕಾಡಿ ಜೀವ ಹಿಂಡತೊಡಗಿದ್ದವು.
*****
ಹಟ್ಟಿಯ ಸುತ್ತ ಕತ್ತಲು ಕಳ್ಳಬೆಕ್ಕಿನಂತೆ ಹೆಜ್ಜೆ ಇಡತೊಡಗಿತ್ತು. ರಂಗ ಮೈ ಮುಟ್ಟಿ ನೋಡಿಕೊಂಡ. ಜ್ವರ ಬಂದಂತೆನಿಸಿತು. ಖುಷಿಯಾಗಿ ಕೌದಿ ಹೊದ್ದು, ಕುರಿ ಮೇಸಲು ಹೋದ ಜೊತೆಗಾರರು ಬರುವ ದಾರಿ ನಿರುಕಿಸುತ್ತ ಕುಳಿತ.